Thursday, 29 November 2018

ಡಿ.2 ರಂದು ಸಿಎನ್‌ಸಿಯಿಂದ 28ನೇ ಕೊಡವ ನ್ಯಾಷನಲ್ ಡೇ : ಸಂತ್ರಸ್ತರ ಸ್ಫೂರ್ತಿ ದಿನವಾಗಿ ಆಚರಣೆ



ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳ ಸ್ವಾಭಿಮಾನದ ಬದುಕಿನ ಹಕ್ಕಿಗಾಗಿ ಮಿಡಿಯುವ ಮತ್ತು ಸ್ಫೂರ್ತಿ ನೀಡುವ ದಿನವನ್ನಾಗಿ ಡಿ. ರಂದು ನಗರದ ಗಾಂಧಿ ಮೈದಾನದಲ್ಲಿ ೨೮ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಯುವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಜಲಸ್ಫೋಟ ಮತ್ತು ಭೂ ಸ್ಫೋಟದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇವರಲ್ಲಿ ಹೊಸ ಬದುಕಿನ ಸ್ಫೂರ್ತಿ ತುಂಬುವ ಉದ್ದೇಶದಿಂದ ಕೊಡವ ನ್ಯಾಷನಲ್ ಡೇಯನ್ನು ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ತಿಳಿಸಿದರು.
ಕಳೆದ ೨೮ ವರ್ಷಗಳಿಂದ ಕೊಡವರ ಹಕ್ಕಿಗಾಗಿ ಶಾಂತಿಯುತ ಹೋರಾಟವನ್ನು ನಡೆಸುತ್ತಾ ಬಂದಿರುವ ಸಿಎನ್ಸಿ ಸಂಘಟನೆ ಇಂದು ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ ಮಿಡಿಯುವ ಕಾರ್ಯವನ್ನು ಮಾಡುತ್ತಿದೆ. ಘಟನೆ ಸಂಭವಿಸಿ ಮೂರು ತಿಂಗಳುಗಳೇ ಕಳೆದಿದ್ದರು ಸರ್ಕಾರ ಯಾವುದೇ ಪರಿಹಾರ ಕಾರ್ಯವನ್ನು ನೈಜ ಕಾಳಜಿಯಿಂದ ಮಾಡುತ್ತಿಲ್ಲ. ಮಂಡ್ಯ ಹಾಗೂ ಹಾಸನ ಭಾಗದ ಮೇಲಿರುವ ಕಾಳಜಿ ಕೊಡಗಿನ ಸಂತ್ರಸ್ತರ ಮೇಲೆ ಇಲ್ಲ. ಸಂತ್ರಸ್ತರ ಪುನಶ್ಚೇತನಕ್ಕಾಗಿ ಸಿಎನ್ಸಿ ನಿರಂತರ ಹೋರಾಟ ನಡೆಸಲಿದ್ದು, ಸ್ವಾಭಿಮಾನದ ಬದುಕು ಕಟ್ಟಿಕೊಡುವವರೆಗೆ ಶಾಂತಿಯುತ ಪರಿಶ್ರಮ ಮುಂದುವರಿಯಲಿದೆ ಎಂದರು.
ಕೊಡವ ನ್ಯಾಷನಲ್ ಡೇ ಸಂದರ್ಭ ಕೊಡವರ ಹಕ್ಕುಗಳನ್ನು ಮಂಡಿಸಲಾಗುವುದು. ೬ನೇ ಷೆಡ್ಯೂಲ್ ಪ್ರಕಾರ ಲಡಾಕ್ ಗಿರಿ ಮಂಡಳಿ, ಬೋಡೋ ಲ್ಯಾಂಡ್, ಗೂರ್ಖಾ ಲ್ಯಾಂಡ್ ಮತ್ತು ಈಶಾನ್ಯ ಭಾರತದ ಗಿರಿಮಂಡಳಿಗಳ ಮಾದರಿಯಲ್ಲಿ ಸ್ವಾಯತ್ತತೆ ರಚನೆಯಾಗಬೇಕು. ಕೊಡವ ಲ್ಯಾಂಡ್ ಸ್ವಾಯತ್ತ ಪ್ರದೇಶವೆಂದು ಘೋಷಣೆ ಮಾಡಬೇಕು, ಕೊಡವ ಬುಡಕಟ್ಟು ಜನಾಂಗವನ್ನು ಸಂವಿಧಾನದ ೩೪೦, ೩೪೨ ವಿಧಿಯಂತೆ ಷೆಡ್ಯೂಲ್ ಪಟ್ಟಿಗೆ ಸೇರಿಸಬೇಕು. ಕೊಡವ ಭಾಷೆಯನ್ನು ೮ನೇ ಷೆಡ್ಯೂಲ್ಗೆ ಸೇರಿಸಬೇಕು, ಕೊಡಗು ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು, ಜಮ್ಮಾ ಭೂಮಿ ಸಂಬಂಧ ೨೦೧೧ರ ಭೂ ಕಂದಾಯ ತಿದ್ದುಪಡಿ ಕಾಯ್ದೆ ಅನುಷ್ಟಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಕೊಡವರ ಭೂಮಿ ಸಾಂಪ್ರದಾಯಿಕ ವೈಯಕ್ತಿಕ ಕಾಯ್ದೆ, ಜನಪದ ಕಾಯ್ದೆ, ಧಾರ್ಮಿಕ ನಂಬಿಕೆಯನ್ನು ಸಂರಕ್ಷಿಸಲು ಮಿಜೋ ಮತ್ತು ನಾಗಾಗಳಿಗೆ ನೀಡಿದಂತೆ ಸಂರಕ್ಷಣೆ ನೀಡಬೇಕು, ಮಣಿಪುರ ಮತ್ತಿತರೆಡೆ ಇರುವಂತೆ ಇನ್ನರ್ ಲೈನ್ ಪರ್ಮಿಟ್ ಜಾರಿ ಮಾಡಬೇಕು, ಟಿಪ್ಪುವಿನಿಂದ ಕೊಡವರ ನರಮೇಧ ನಡೆದ ದೇವಟ್ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕ, ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲಿರುವ ವಿನಾಯ್ತಿ ಹಕ್ಕು ಅಬಾಧಿತವಾಗಿ ಮುಂದುವರಿಸಬೇಕು, ಆಂಗ್ಲೋ ಇಂಡಿಯನ್ ಸಮುದಾಯದ ಮಾದರಿಯಲ್ಲಿ ಸಂವಿಧಾನದ ೩೩೧ನೇ ವಿಧಿಯಂತೆ ಕೊಡವರಿಗೆ ರಾಜಕೀಯ ಮೀಸಲಾತಿ ನೀಡಬೇಕು, ಕೊಡವ ಜನಾಂಗಕ್ಕೆ ಯಹೂದಿ, ಪಾರ್ಸಿ, ಸಿಂಧಿ, ಯೆಜೀದಿ, ಕುರ್ಗಿ, ಬಲೂಚಿ, ಪಸ್ತೂನ್ ಮತ್ತು ಕಾಶ್ಮೀರಿ ಪಂಡಿತರಂತೆ ಜಾಗತಿಕ ಮಾನ್ಯತೆ ನೀಡಬೇಕು, ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಬೇಕು, ಕಾಶ್ಮೀರದ ಮಾದರಿ ಸೂಕ್ಷ್ಮ ಪ್ರದೇಶವಾಗಿರುವ ಕೊಡಗನ್ನು ರಕ್ಷಿಸಲು ಎನ್ಐಎ ಮತ್ತು ರಾ ಏಜೆನ್ಸಿಯನ್ನು ಸ್ಥಾಪಿಸಬೇಕು, ಜೀವನದಿ ಕಾವೇರಿಗೆ ಜೀವಂತ ವ್ಯಕ್ತಿಯ ಸ್ಥಾನಮಾನವನ್ನು ನೀಡಬೇಕು, ಕೊಡಗಿನಲ್ಲಿ ಗೋವಧೆ ಮತ್ತು ಗೋಸಾಗಾಟವಾಗದಂತೆ ನಿಷೇಧ ಹೇರಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಗುವುದೆಂದು ನಾಚಪ್ಪ ಮಾಹಿತಿ ನೀಡಿದರು.